ಅದ್ದೂರಿ ಚಿತ್ರ ನಿರ್ಮಾಣಕ್ಕೆ ಹೆಸರಾಗಿರುವ ರಾಮು ಅವರು ಖುಷಿಯಲ್ಲಿದ್ದಾರೆ. ತಮ್ಮ ರಾಮು ಫಿಲಂಸ್ ಸಂಸ್ಥೆಯಡಿ ನಿರ್ಮಾಣವಾಗಿದ್ದ ರಾಜ್ವಿಷ್ಣು ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿ, ರೇಣುಕಾಂಬ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ಕೂಡಾ ಮುಕ್ತಾಯಗೊಂಡಿರುವುದು ರಾಮು ಅವರ ಖುಷಿಗೆ ಕಾರಣ. ‘ರಾಜ್ವಿಷ್ಣು’ ಚಿತ್ರದ ಕೆಲಸಗಳು ಸಂಪೂರ್ಣಗೊಂಡಿರುವುದರಿಂದ ಫೆಬ್ರವರಿ ತಿಂಗಳಲ್ಲಿ ತೆರೆಗೆ ತರಲು ಯೋಜನೆ ರೂಪಿಸಲಾಗಿದೆ.
ಇದುವರೆಗೆ ಒಂದಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿರುವ ಕೆ. ಮಾದೇಶ್ ನಿರ್ದೇಶನದ ‘ರಾಜ್ ವಿಷ್ಣು ಚಿತ್ರ ಶರಣ್ ಮತ್ತು ಚಿಕ್ಕಣ್ಣ ಮುಖ್ಯಭೂಮಿಕೆಯಲ್ಲಿರುವ ಚಿತ್ರ. ಇವರಿಬ್ಬರು ನಾಯಕರಾಗಿದ್ದಾರೆಂದ ಮೇಲೆ ಈ ಚಿತ್ರ ಸಂಪೂರ್ಣ ಕಾಮಿಡಿ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವೇನಿಲ್ಲ. ಇದುವರೆಗೆ ಸಾಹಸ ಪ್ರಧಾನ ಚಿತ್ರಗಳನ್ನೇ ನಿರ್ಮಾಣ ಮಾಡುತ್ತಾ ಬಂದಿದ್ದ ರಾಮು ಈ ಮೂಲಕ ಕಾಮಿಡಿ ಚಿತ್ರ ನಿರ್ಮಾಣಕ್ಕೂ ಕೈಯಿಟ್ಟಿದ್ದಾರೆ.
ತಮಿಳಿನಲ್ಲಿ ನಿರ್ಮಾಣಗೊಂಡು ಯಶಸ್ವಿಯಾಗಿದ್ದ ‘ರಜನಿ ಮುರುಘ’ ಚಿತ್ರದ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು ‘ರಾಜ್ ವಿಷ್ಣು’ ಸಿನಿಮಾವನ್ನು ರೂಪಿಸಲಾಗಿದೆ. ಈ ಹಿಂದೆ ‘ಅಧ್ಯಕ್ಷ’ ಚಿತ್ರಕ್ಕೆ ಕಥೆ ಬರೆದಿದ್ದ ಪೊನ್ ರಾಜ್ ಅವರು ‘ರಜನಿ ಮುರುಘ’ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ನಿರ್ದೇಶಿಸಿದ್ದರು. ಆದರೆ ಕನ್ನಡದ ನೇಟಿವಿಟಿಗೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಲಗುತ್ತಿದ್ದು, ಈ ಹಿಂದೆ ಆಕಾಶ್ ಮತ್ತು ಅರಸು ಚಿತ್ರಗಳಿಗೆ ಕಥೆ ಒದಗಿಸಿದ್ದ ಖ್ಯಾತ ಬರಹಗಾರ ಜನಾರ್ಧನ ಮಹರ್ಷಿ ‘ರಾಜ್ ವಿಷ್ಣು’ ಚಿತ್ರಕ್ಕೆ ಚಿತ್ರಕತೆ ಬರೆದಿದ್ದಾರೆ.
ಶರಣ್ ಮತ್ತು ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದಲ್ಲಿ ಸಾಧು ಕೋಕಿಲ, ರವಿಶಂಕರ್, ವೀಣಾ ಸುಂದರ್, ರಮೇಶ್ ಪಂಡಿತ್, ಮಿಮಿಕ್ರಿ ಗೋಪಿ ಮತ್ತು ಸ್ವಾತಿ ಸೇರಿದಂತೆ ಇನ್ನು ಅನೇಕರ ತಾರಾಗಣವಿದೆ. ಮುಂಬೈ ಮೂಲದ ವೈಭವಿ ‘ರಾಜ್ ವಿಷ್ಣು’ ಚಿತ್ರಕ್ಕೆ ನಾಯಕಿಯಾಗಿದ್ದಾರೆ.
ರಾಜೇಶ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ ನೃತ್ಯ, ಥ್ರಿಲ್ಲರ್ ಮಂಜು ಅವರ ಸಾಹಸ ಸಂಯೋಜನೆ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಯೋಗರಾಜ್ ಭಟ್, ಡಾ. ವಿ. ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಅವರ ಗೀತರಚನೆ, ರಘು ನಿಡುವಳ್ಳಿ ಸಂಭಾಷಣೆ, ಜನಾರ್ಧನ ಮಹರ್ಷಿ ಚಿತ್ರಕತೆ, ಸುರೇಶ್ ಗೋಸ್ವಾಮಿ ಸಹ ನಿರ್ದೇಶನ, ಅನಿಲ್ ಕುಮಾರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.